ಜನ್ನ (೧೩ ನೇ ಶತಮಾನ)
 
ಸ್ವ-ವಿವರ
 
ಕಾವ್ಯನಾಮ : ಜನ್ನ, ಜನ್ನಯ್ಯ, ಜನ್ನಮಯ್ಯ, ಜನ್ನಿಗ, ಜನ್ನಮರಸ, ಜನಾರ್ಧನದೇವ, ಜಾನಕಿ ಎಂದು ತನ್ನ ಹೆಸರನ್ನೇ ಕವಿ ಹಲವು ಬಗೆಯಾಗಿ ಹೇಳಿಕೊಂಡಿದ್ದಾನೆ.
ನಿಜನಾಮ/ಪೂರ್ಣನಾಮ : ಜನ್ನ
ಜನನ :  
ಮರಣ :  
ತಂದೆ :  
ತಾಯಿ:  
ಜನ್ಮ ಸ್ಥಳ :  
ಮನೆ,ಮನೆತನ : `ಶಬ್ದಮಣಿ ದರ್ಪಣ'ವನ್ನು ಬರೆದ ಕೇಶಿರಾಜನು ಇವನ ಸೋದರಳಿಯ. `ಸೂಕ್ತಿ ಸುಧಾರ್ಣವ'ದ ಕರ್ತೃ ಮಲ್ಲಿಕಾರ್ಜುನನು ಜನ್ನನ ಸೋದರಿಯ ಗಂಡ.
ಇಂಥ ಅಪೂರ್ವವಾದ ವಿದ್ವದ್ವಂಶಕ್ಕೆ ಸೇರಿದ ಪುಣ್ಯಶಾಲಿ ಜನ್ನಕವಿ.
ಪತ್ನಿ :  
ಮಕ್ಕಳು :  
 
ವಿದ್ಯಾಭ್ಯಾಸ :
ಎರಡನೆಯ ನಾಗವರ್ಮ ಇವನಿಗೆ ಉಪಾಧ್ಯಾಯ. ಇವನ ಗುರು ಗಂಡವಿಮುಕ್ತ ರಾಮಚಂದ್ರದೇವಮುನಿ.
 
ವೃತ್ತಿ:
ವೀರಬಲ್ಲಾಳನೆಂದು ಹೆಸರುಗೊಂಡ ಗಿರಿದುರ್ಗಮಲ್ಲರಾಜನ ಆಸ್ಥಾನ ಕವಿ, ಜನ್ನ. ಅನಂತರ ಆ ರಾಜನ ಮಗ ನರಸಿಂಹನ ಆಸ್ಥಾನದಲ್ಲಿ ಮಂತ್ರಿ, ದಂಡಾದೀಶ, ಕವಿ ಎಲ್ಲವೂ ಆಗಿದ್ದನು.
 
ಸಾಹಿತ್ಯಕೃತಿಗಳು :
ಯಶೋಧರ ಚರಿತೆ : ಇದು ನಾಲ್ಕು ಅವತಾರಗಳನ್ನುಳ್ಳ ಚಿಕ್ಕದಾದರೂ ಚೊಕ್ಕವಾಗಿರುವ ಉತ್ಕೃಷ್ಟ ಕಾವ್ಯ. ಇದರಲ್ಲಿ ಮಾರಿದತ್ತನೆಂಬ `ಹಿಂಸಾರಭಸಮತಿ'ಯಾದ ದೊರೆಯನ್ನು ಧರ್ಮಕ್ಕೆ ತಿರುಗಿಸಿದ ಶುಭ ಕಥೆ ಬಂದಿದೆ.
ಸಂಕಲ್ಪಹಿಂಸೆಯೊಂದರಿಂದ ಹಲವು ಹೀನಯೋನಿಗಳಲ್ಲಿ ಹುಟ್ಟಿ ಹಲವು ಕಷ್ಟಸಂಕಟಗಳನ್ನು ಅನುಭವಿಸಿದ ಚಂದ್ರಮತಿ ಯಶೋಧರರೆಂಬ ತಾಯಿ ಮಕ್ಕಳು ಕೋಳಿಗಳಾಗಿದ್ದಾಗ ಜೀನದೀಕ್ಷೆ ವಹಿಸಿದ ನಿಮಿತ್ತದಿಂದ ತಮಗೆ ಮತ್ತೆ ಮಾನುಷಜನ್ಮ ಬಂದು ಅಭಯರುಚಿ ಅಭಯಮತಿಗಳೆಂಬ ಅಣ್ಣತಂಗಿಯರಾಗಿ ಹುಟ್ಟಿದರು.
ಚಂದಮಾರಿ ದೇವತೆಗೆ ಬಲಿ ಕೊಡುವ ಸಲುವಾಗಿ ಅವರನ್ನು ತಳವಾರನು ಹಿಡಿತರಲು ಅಕಸ್ಮಾತ್ ಮಾರಿದತ್ತನಿಗೆ ಅವರ ವಿಷಯದಲ್ಲಿ ಅನುಕಂಪ ಹುಟ್ಟಿ ಅವರ ಚರಿತ್ರೆಯನ್ನು ವಿಚಾರಿಸಲು ಅವರು ತಮ್ಮ ಜನ್ಮಾಂತರ ಕಥೆಯನ್ನೆಲ್ಲಾ ಹೇಳಿದರು. ಅದನ್ನು ಕೇಳಿ ಮಾರಿದತ್ತನಿಗೆ, ಆ ಚಂಡಮಾರಿದೇವತೆಗೂ ಹಿಂಸಾಕರ್ಮದಲ್ಲಿ ಅಸಹ್ಯ ಮೂಡಿತು. ಅವರಿಬ್ಬರೂ ಅಭಯರುಚಿ ಕುಮಾರನಲ್ಲಿ ಅಹಿಂಸೆಯ ದೀಕ್ಷೆ ಕೈಗೊಂಡರು. ಇದಿಷ್ಟು ಕಥೆಯನ್ನು ಅಚ್ಚುಕಟ್ಟಾಗಿ ಕಂದಪದ್ಯಗಳಲ್ಲಿ ಜನ್ನ ನಾಲ್ಕು ಚಿಕ್ಕ ಸಂಧಿಗಳಲ್ಲಿ ಹೇಳಿ ಮುಗಿಸಿದ್ದಾನೆ.
ಆ ಸಂಧಿಗಳಿಗೆ ಅವತಾರಗಳೆಂದೇ ಹೆಸರು. ಸನ್ನಿವೇಶಚಿತ್ರಣ, ಪಾತ್ರಪೋಷಣ, ಮನಸ್ಸಿನ ಧರ್ಮಸಂಕಟಗಳನ್ನು ಹೃದಯಂಗಮವಾಗಿ ಚಿತ್ರಿಸುವಿಕೆ, ಎಲ್ಲದರಲ್ಲಿಯೂ ಜನ್ನ ಈ ಕಾವ್ಯದಲ್ಲಿ ಬಹಳ ಯಶಸ್ವಿಯಾಗಿದ್ದಾನೆ. ಇದನ ಮಧ್ಯೆ ಧರ್ಮಜಿಜ್ಞಾಸೆ, ಭವಾವಳಿಯ ನಿರೂಪಣೆಗಳು ಬಂದಿವೆ. ಈತನ ಕಂದಪದ್ಯಗಳ ಓಟ ಬಹಳ ರಮಣೀಯವಾಗಿದೆ.
ಅನಂತನಾಥ ಪುರಾಣ : ಇದು ಹದಿನಾಲ್ಕನೆಯ ತೀರ್ಥಂಕರನ ಚರಿತ್ರೆ.
ಇದರಲ್ಲಿ ಹದಿನಾಲ್ಕು ಆಶ್ವಾಸನೆಗಳಿವೆ. ಇದರಲ್ಲಿ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ , ಜನ್ನ.
ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಈ ಕಥೆಯಿಂದ ಈ ತೀರ್ಥಂಕರ ಪುರಾಣಕ್ಕೆ ಒಂದು ಹೆಚ್ಚಿನ ಮೆರುಗು ಬಂದಿದೆಯೆಂದು ಹೇಳಬಹುದು. ಜನ್ನನ ಲೋಕಾನುಭವ, ಮನುಷ್ಯ ಸ್ವಭಾವ ಪರಿಜ್ಞಾನ, ಇವು `ಅನಂತನಾಥ ಪುರಾಣ'ದ ಹಲವು ಪಾತ್ರಗಳ ಚಿತ್ರದಲ್ಲಿ ಚೆನ್ನಾಗಿ ಪ್ರಕಾಶಕ್ಕೆ ಬಂದಿದೆ.
ಜನ್ನ ತುಂಬುಜೀವನವನ್ನು ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಜೀವನರಸಿಕ. `ಯಶೋಧರ ಚರಿತೆ'ಯಲ್ಲಿಯೂ `ಅನಂತನಾಥ ಪುರಾಣ'ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ.
ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು.
ಕ್ರಿ.ಶ. ೧೨೦೯ರಲ್ಲಿ `ಯಶೋಧರ ಚರಿತೆ'ಯನ್ನು, ಕ್ರಿ.ಶ. ೧೨೩೦ರಲ್ಲಿ `ಅನಂತನಾಥ ಪುರಾಣ'ವನ್ನೂ ರಚಿಸಿದನು.
ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು.
ಜನ್ನ `ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು' ಎಂದು ಹೇಳಿಕೊಂಡಿರುವುದರಿಂದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು.
ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು.
ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ `ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್' ಎಂದು ಕೊಂಡಾಡಿದ್ದಾನೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಇವನು `ನಾೞ್ಪ್ರಭು'ವೂ ಆಗಿದ್ದನಂತೆ! `ಜಿನೇಂದ್ರ ನಿಲಯ ನಿರ್ಮಾಣಧನಂ' ಎಂದು ಹೇಳಿಕೊಂಡಿರುವ ಜನ್ನನು ಶ್ರೀಮಂತನಾಗಿದ್ದನೆಂದು ತಿಳಿಯಬೇಕು.
ಇವನಿಗೆ `ಕವಿಚಕ್ರವರ್ತಿ', 'ಕವಿ ಭಾಳನೇತ್ರಂ', `ಉದ್ದಂಡಕವಿ' `ಅಸಹಾಯ ಸುಕವಿ', `ಸಾಹಿತ್ಯ ರತ್ನಾಕರಂ' ಎಂಬ ಬಿರುದುಗಳಿವೆ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :